ದೇಶ ಭಕ್ತ ವೀರರ ನಿರಂತರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿತು. ಅವರ ಕನಸು ನನಸಾಯಿತು. ಆದರೆ ಇಂದು ಸ್ವಾತಂತ್ರ್ಯದ ಅರ್ಥ ಕೆಡುತ್ತಿದೆ ಎಂದು ಟಿ.ಆರ್.ಕೆ ಭಟ್ರವರು ವಿಷಾದ ವ್ಯಕ್ತಪಡಿಸಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ಮಾತನಾಡುತ್ತಾ, ‘ನಾವು ಪಡೆದ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ನಿರಂತರ ಹೋರಾಟದ ಅಗತ್ಯವಿದೆ ಸೂರ್ಯ ಚಂದ್ರರಿರುವಲ್ಲಿಯವರೆಗೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಿ’ ಎಂದು ಶುಭ ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕರವರು ಕಾಲೇಜಿನಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ‘ಸ್ವಾತಂತ್ರ್ಯವೆಂಬುದು ಸ್ವೇಚ್ಛೆಯಲ್ಲ, ಪ್ರತಿಯೊಬ್ಬ ಪ್ರಜೆಯೂ ಭ್ರಷ್ಟಾಚಾರವನ್ನು ಬಿಟ್ಟು ಸ್ವಾಭಿಮಾನದಿಂದ ಬದುಕುವುದು ನಿಜವಾದ ಸ್ವಾತಂತ್ರ್ಯ’ ಎಂದರು. ತಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ತುಂಬಿಕೊಂಡಿದೆ ಅದು ಕೊನೆಗೊಳ್ಳುವಂದು ಭಾರತ ಸ್ವತಂತ್ರ ಎಂದರು.
ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ರವರು ಮನಸ್ಸು ಸ್ವಚ್ಛವಾದರೆ ಮನುಷ್ಯ ಶುದ್ಧನಾಗುತ್ತಾನೆ, ಪರಿಸರ ಶುದ್ಧವಾಗುತ್ತದೆ. ಆ ಮೂಲಕ ದೇಶ ಅಭಿವೃದ್ಧಿಯಾಗುತ್ತದೆ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲ ಪ್ರೊ. ಪಿ. ಶಂಕರನಾರಾಯಣ ಹೊಳ್ಳರು ಹಿಂದೆ ವ್ಯಾಪಾರದ ಉದ್ದೇಶದಲ್ಲಿ ಹೊರರಾಷ್ಟ್ರದವರು ಬಂದು ವ್ಯಾಪಾರ ಮಾಡಿ ದೇಶವನ್ನೇ ಕಸಿದುಕೊಂಡರು ಅದೇ ರೀತಿ ಇಂದೂ ನಡೆಯುತ್ತಿದೆ. ಆದುದರಿಂದ ನಾವು ಜಾಗೃತರಾಗಬೇಕಾಗಿದೆ, ಸ್ವದೇಶೀ ವಸ್ತುಗಳನ್ನು ಬಳಸುವ ಮೂಲಕ ದೇಶ ಪ್ರೇಮವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. ಉಪನ್ಯಾಸಕ ಶ್ರೀನಿಧಿ ಸ್ವಾಗತಿಸಿ, ಎನ್.ಎಸ್.ಎಸ್ ಯೋಜನಾಧಿಕಾರಿ, ಉಪನ್ಯಾಸಕ ಶಂಕರ ಖಂಡಿಗೆಯವರು ವಂದಿಸಿದರು. ವಿದ್ಯಾರ್ಥಿನಿಯರು ದೇಶ ಭಕ್ತಿಗೀತೆಗಳನ್ನು ಹಾಡಿದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು.